ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯವರ ಸ್ಪರ್ಧೆಯಿಂದಾಗಿ ಇಡೀ ದೇಶದ ಗಮನ ಸೆಳೆದಿದೆಮಂಡ್ಯ ಲೋಕಸಭಾ ಕ್ಷೇತ್ರ.
ಅದರಲ್ಲೂ ಸುಮಲತಾ ಪರವಾಗಿ ಸ್ಟಾರ್ ನಟರಾದ ದರ್ಶನ್ ಮತ್ತು ಯಶ್ ಪ್ರಚಾರ ನಡೆಸುತ್ತಿದ್ದು ಸಿಎಂ ಸೇರಿದಂತೆ ಜೆಡಿಎಸ್ ನಾಯಕರು ಸುಮಲತಾ ಬೆಂಬಲಿಗರಾದ ಸ್ಟಾರ್ ನಟರ ಮೇಲೆ ವಾಗ್ದಾಳಿಯನ್ನೇ ನಡೆಸಿದ್ದಾರೆ.
ಸ್ಟಾರ್ ನಟರನ್ನು ಕಳ್ಳೆತ್ತು ಎಂದು ಸಿಎಂ ಟೀಕಿಸಿದ್ದಕ್ಕೆ ಯಶ್ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಚಾರದ ವೇಳೆ ಮಾತನಾಡಿದ ಯಶ್, ಯಾರ ಬಗ್ಗೆಯೂ ದುಷ್ಮನಿ ಮಾಡುವ ಉದ್ದೇಶವಿಲ್ಲ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾವೇನು ಕದ್ದಿದ್ದೇವೆ ತೋರಿಸಿ ಎಂದು ಕೇಳಿದ್ದಾರೆ.
ಮಂಡ್ಯದ ಎಲ್ಲಾ ಊರಿನಲ್ಲಿ ಅಂಬರೀಶಣ್ಣನ ಕೊಡುಗೆ ಕಾಣುತ್ತಿದೆ. ನಾವು ಮಾತನಾಡಿದರೆ ಸಿನಿಮಾದವರು, ನೀವೇನು ಸತ್ಯ ಹರಿಶ್ಚಂದ್ರನ ತುಂಡುಗಳಾ? ಅಂಬರೀಶಣ್ಣ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ. ನಾವು ಮನಸ್ಸಾಕ್ಷಿ ಇಟ್ಟುಕೊಂಡು ಬದುಕುತ್ತಿದ್ದೇವೆ. ನಮಗೆ ಕೆಲಸ ಮಾಡಿದ್ದೇವೆ ಅಂತ ಸಾಕ್ಷಿ ಕೊಡುವುದಕ್ಕೆ ಆಗಲ್ಲ. ಸಾಕ್ಷಿಯನ್ನು ಮಂಡ್ಯದ ಜನ ಕೊಡುತ್ತಾರೆ ಎಂದು ಹೇಳಿದ್ದಾರೆ.
ಅಲ್ಲದೇ, ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ಯಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿದ ಅವರು, ನಾವು ಚುನಾವಣೆ ಪ್ರಚಾರಕ್ಕೆ ಏಕೆ ಬಂದಿದ್ದೇವೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಚುನಾವಣೆಗೆ ಬಂದಿರುವುದಕ್ಕೆ ನಾವು ಕೆಟ್ಟವರು ಆಗಿದ್ದೇವೆ ಎಂದು ಹೇಳಿದ್ದಾರೆ.
ಮನುಷ್ಯನಿಗೆ ನೀಯತ್ತು ಬಹಳ ಮುಖ್ಯ ನಾನು ಬೆಳೆಯುವ ಸಂದರ್ಭದಲ್ಲಿ ಅಂಬರೀಶ್ ಅವರು ಬೆನ್ನಿಗೆ ನಿಂತು ಆಶೀರ್ವಾದ ಮಾಡಿದರು. ಅವರ ಕುಟುಂಬಕ್ಕೆ ನಾವು ಮಕ್ಕಳಾಗಿದ್ದೇವೆ. ಅದನ್ನು ಯಾರಾದರೂ ಟೀಕೆ ಮಾಡಿದರೆ ಯಾರಾದರೂ ಪ್ರಶ್ನೆ ಮಾಡಿದರೆ ಅದು ಸರಿಯಲ್ಲ ಎಂದು ಟಾಂಗ್ ನೀಡಿದ್ದಾರೆ.
ಅಂಬರೀಶ್ ಇದ್ದಾಗ ಸುಮ್ಮನೆ ನಿಲ್ಲುತ್ತಿದ್ದವರು ಈಗ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಚುನಾವಣೆ ಮಂಡ್ಯ ಸ್ವಾಭಿಮಾನದ ಪ್ರಶ್ನೆಯಾಗಿದೆ. ಸುಮಲತಾ ಅಂಬರೀಶ್ ಅವರು ಚುನಾವಣೆಗೆ ಸ್ಪರ್ಧಿಸಿದ ಕೂಡಲೇ ಕೆಟ್ಟವರಾಗಿ ಹೋದರೆ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಕೆಲಸ ನೀವು ಮಾಡಿದ್ದರೆ ಜನರು ಆಶೀರ್ವಾದ ಮಾಡುತ್ತಾರೆ. ಅದನ್ನು ಬಿಟ್ಟು ಗಂಡ ಸತ್ತವರು ಮನೆ ಸೇರಿಕೊಳ್ಳಬೇಕು. ಮನೆಯಿಂದ ಆಚೆ ಬರಬಾರದು. ಯಾವುದೋ ಊರಿಗೆ ಸೇರಿದವರು, ಜಾತಿಗೆ ಸಂಬಂಧಪಟ್ಟವರಲ್ಲ ಎಂದೆಲ್ಲಾ ಹೇಳುವುದು ಯಾವ ನ್ಯಾಯ ಪ್ರಶ್ನಿಸಿದ್ದಾರೆ.
ಸುಮಲತಾ ಅವರ ಪರ ಪ್ರಚಾರಕ್ಕೆ ಬಂದ ನಾವು ಕಳ್ಳ ಎತ್ತುಗಳು ಆಗಿ ಬಿಡುತ್ತೇವೆಯೇ ಎಂದು ಕೇಳಿದ ಯಶ್, ರೈತರ ಬಗ್ಗೆ ನಮಗೂ ಅಭಿಮಾನ ಇದೆ. ಯಾರು ನಮ್ಮನ್ನು ಹೀಯಾಳಿಸುತ್ತಾರೆಯೋ ಅಷ್ಟೇ ನಾವು ಮೆರೆಯುತ್ತೇವೆ. ಸುಮಲತಾ ಅಕ್ಕ ಒಳ್ಳೆಯ ಕೆಲಸ ಮಾಡುತ್ತಾರೆ. ಅವರ ಜೊತೆಗೆ ನಾವು ಇರುತ್ತೇವೆ. ಒಂದೇ ಒಂದು ಅವಕಾಶ ಮಾಡಿಕೊಡಿ ಎಂದು ಹೇಳಿ ಜೆಡಿಎಸ್ ನಾಯಕರಿಗೆ ಬಹಿರಂಗವಾಗಿಯೇ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ.