ಕನ್ನಡಿಗ ಕೆ.ಎಲ್.ರಾಹುಲ್ ಟೀಂ ಇಂಡಿಯಾ ಪರ ಬ್ಯಾಟಿಂಗ್ ಮಾತ್ರವಲ್ಲದೆ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ವಿಕೆಟ್ ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡಿದರು. ಇದರಿಂದ ಆಕರ್ಷಿತರಾದ ಭಾರತದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಸೋಮವಾರ ರಾಹುಲ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಕೆ.ಎಲ್.ರಾಹುಲ್ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಅವರಂತೆ ಹೆಚ್ಚಿನ ಅವಕಾಶಗಳನ್ನು ಪಡೆಯಬೇಕು. 5ನೇ ಕ್ರಮಾಂಕದಲ್ಲಿ ರಾಹುಲ್ ಬ್ಯಾಟಿಂಗ್ ಮಾಡಿ ತಂಡಕ್ಕೆ ಅತ್ಯುತ್ತಮ ಫಿನಿಶರ್ ಪಾತ್ರವನ್ನು ವಹಿಸಬಹುದು. ಅಷ್ಟೇ ಅಲ್ಲದೆ ತಂಡಕ್ಕೆ ಉತ್ತಮ ವಿಕೆಟ್ ಕೀಪರ್ ಸಹ ಸಿಕ್ಕಂತೆ ಆಗುತ್ತದೆ ಎಂದು ಸೆಹ್ವಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆ.ಎಲ್.ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನಾಲ್ಕು ಬಾರಿ ವಿಫಲವಾದರೆ ತಂಡದ ಆಯ್ಕೆ ಸಮಿತಿ ಅವರನ್ನು ಬದಲಾಯಿಸುತ್ತದೆ. ಆದರೆ ಎಂ.ಎಸ್.ಧೋನಿ ಅವರ ವಿಚಾರದಲ್ಲಿ ಇಂತಹ ಯಾವುದೇ ಬದಲಾವಣೆ ಬರಲಿಲ್ಲ. ಆಟಗಾರರಿಗೆ ಸಮಯ ನೀಡದಿದ್ದರೆ ಅವರು ಹೇಗೆ ಬೆಳೆಯಲು ಹಾಗೂ ಕಲಿಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ನಾನು ಪ್ರಾರಂಭದ ಮೊದಲು ಮಿಡಲ್ ಆರ್ಡರ್ ನಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಿದ್ದೆ. ಈ ವೇಳೆ ಅನೇಕ ತಪ್ಪುಗಳನ್ನು ಮಾಡಿದ್ದೇನೆ. ಇದರಿಂದಾಗಿ ತಂಡವು ಸಹ ಅನೇಕ ಬಾರಿ ಸೋಲನ್ನು ಎದುರಿಸಬೇಕಾಯಿತು. ಆದರೆ ಆಟಗಾರರು ಬೆಂಚ್ ಮೇಲೆ ಕುಳಿತು ದೊಡ್ಡವರಾಗಲು ಸಾಧ್ಯವಿಲ್ಲ. ಆಟಗಾರರಿಗೆ ಸಮಯ ನೀಡುವುದು ಮುಖ್ಯ ಎಂದು ತಿಳಿಸಿದ್ದಾರೆ.
ಕೆ.ಎಲ್.ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ 47 ರನ್ ಮತ್ತು ಎರಡನೇ ಪಂದ್ಯದಲ್ಲಿ 5ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ 80ರನ್ ಗಳಿಸಿದರು. ಇದಲ್ಲದೆ ಎರಡನೇ ಪಂದ್ಯದಲ್ಲಿ ಅವರು ಆ್ಯರನ್ ಫಿಂಚ್ ಅವರನ್ನು ಉತ್ತಮ ಶೈಲಿಯಲ್ಲಿ ಸ್ಟಂಪ್ ಮಾಡಿದ್ದರು. ಇದರ ನಂತರ ರಾಹುಲ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸಿಸಲಾಯಿತು. ಮೂರನೇ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಗಾಯಗೊಂಡ ನಂತರ ರಾಹುಲ್ ಆರಂಭಿಕ ಬ್ಯಾಟ್ಸ್ಮನ್ ಆಗಿ ಮೈದಾಕ್ಕಿಳಿದು 19 ರನ್ ಗಳಿಸಿದ್ದರು.