ಸುದ್ದಿ

ನಮಗೆ ಶಂಕ್ರಣ್ಣನ ಬಗ್ಗೆ ಗೊತ್ತಿರದ ಕುತೂಹಲಕಾರಿ ವಿಚಾರವೊಂದನ್ನು ಅಂಚಿಕೊಂಡ ಜೈ ಜಗದೀಶ್…​!

By admin

October 18, 2019

ಬಿಗ್​ಬಾಸ್​ ರಿಯಾಟಲಿ ಶೋ ದಿನದಿಂದ ದಿನಕ್ಕೆ ತನ್ನ ಕುತೂಹಲವನ್ನು ದ್ವಿಗುಣಗೊಳಿಸುತ್ತಿದೆ. ಚಿತ್ರರಂಗದಲ್ಲಿ ಘಟಿಸಿಹೋದಂತಹ ಹಲವು ಘಟನೆಗಳು ಬಿಗ್​ಬಾಸ್​ನಲ್ಲಿ ಅನಾವರಣಗೊಳ್ಳುತ್ತಿದೆ. ಮೊನ್ನೆ ಶಂಕರ್​ನಾಗ್​ ಹಾಗೂ ಮಂಜುಳಾ ಬಗ್ಗೆ ರವಿಬೆಳಗೆರೆ ಅವರು ಮಾತನಾಡಿದ್ದರು. ಇದೀಗ ಹಿರಿಯ ನಟ ಜೈ ಜಗದೀಶ್ ಶಂಕರ್​ನಾಗ್​ ಬಗ್ಗೆ ಕುತೂಹಲಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.

ನಿನ್ನೆ ನಡೆದ ಸಂಚಿಕೆಯಲ್ಲಿ ಜೈ ಜಗದೀಶ್​ ಇತರೆ ಸ್ಪರ್ಧಿಗಳ ಜತೆ ಮಾತನಾಡುವಾಗ ಒಂದು ಪ್ರಶ್ನೆಯನ್ನು ಮುಂದಿಟ್ಟರು. ಒಬ್ಬ ಫೇಮಸ್​ ನಟ ತನ್ನ ಮಾರ್ಕೆಟ್​ ಬಿದ್ದಾಗ ವ್ಯಾನ್​ ಒಳಗೆ ಕ್ಯಾಂಟೀನ್​ ಇಟ್ಟುಕೊಂಡು ಓಡಾಡುತ್ತಿದ್ದರು. ಅವರು ಯಾರು ಗೊತ್ತಾ ಎಂದು ಪ್ರಶ್ನಿಸಿದರು. ಇದಕ್ಕೆ ನಾನಾ ಹೆಸರುಗಳು ಬಂದರೂ ಯಾರೊಬ್ಬರು ಸರಿಯಾದ ಉತ್ತರ ನೀಡಲಿಲ್ಲ. ಆಗ ಸ್ವತಃ ಜೈ ಜಗದೀಶ್ ಅವರೇ ಶಂಕರ್​ನಾಗ್​ ಹೆಸರು ಹೇಳಿದಾಗ ಎಲ್ಲರೂ ಒಮ್ಮೆ ಬೆಕ್ಕಸ ಬೆರಗಾದರು.

ಅವರ ಮಾರ್ಕೆಟ್​ ಯಾವಾಗ ಬಿದ್ದಿತ್ತು ಸರ್​ ಎಂದು ಎಲ್ಲರೂ ಅಚ್ಚರಿಯಿಂದ ಕೇಳಿದಾಗ, ಸುಮಾರು ಮೂರು ವರ್ಷ ಶಂಕರ್​ನಾಗ್​ ಅವರಿಗೆ ಮಾರ್ಕೆಟ್​ ಇರಲಿಲ್ಲ. ಆಗ ಮೆಟಡೋರ್​ ವ್ಯಾನ್​ನಲ್ಲಿ ನಗರದ ಕ್ವೀನ್ಸ್ ಪ್ರತಿಮೆ ಬಳಿ ಕ್ಯಾಂಟಿನ್​ ರನ್​ ಮಾಡುತ್ತಿದ್ದರು. ಆದರೆ, ನಂತರದ ದಿನಗಳಲ್ಲಿ ಅವರೇ ಬಹುದೊಡ್ಡ ನಟನಾದರು ಎಂದು ತಿಳಿಸಿದರು. ಅವರ ಆದರ್ಶಗಳನ್ನು ಕೇಳಿದರೆ, ಇಂದಿಗೂ ರೋಮಾಂಚನವಾಗುತ್ತದೆ.

ಅಂದೇ ಮೆಟ್ರೋ ಪರಿಕಲ್ಪನೆಯನ್ನು ಮುಂದಿಟ್ಟಿದ್ದರಂತೆ, ಅವರ ಸ್ವಂತದ ಹಣದಲ್ಲಿ ವಿದೇಶಕ್ಕೆ ಹೋಗಿ ಮೆಟ್ರೋ ಬಗ್ಗೆ ತಿಳಿದುಕೊಂಡುಬಂದಿದ್ದರಂತೆ ಎಂದು ಸ್ಪರ್ಧಿಗಳು ಕೇಳಿದಾಗ ಜೈ ಜಗದೀಶ್​ ಹೌದು, ಮೆಟ್ರೋ ಜತೆಗೆ ನಂದಿ ಬೆಟ್ಟ ಕೆಳಗಿನವರೆಗೂ ರೋಪ್​ ವೇ ಮಾಡಲು ಯೋಜನೆ ಹಾಕಿಕೊಂಡಿದ್ದರು ಎಂಬ ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದರು.ವಿಶೇಷ ಅಂದರೆ ಶಂಕರ್​ನಾಗ್​ ಅವರ ಕನಸಾಗಿದ್ದ ಮೆಟ್ರೊ ಇಂದು ಕ್ವೀನ್ಸ್​ ಪ್ರತಿಮೆಯ ಮಾರ್ಗದಲ್ಲೇ ಸಾಗುತ್ತದೆ.