ಸುದ್ದಿ

ಕೊನೆಗೂ ಬಯಲಾಯ್ತು ಪ್ರಸಾದದಲ್ಲಿ ವಿಷ ಬೇರೆಸಿದ್ದ ಪಾಪಿಗಳ ಬೆಚ್ಚಿ ಬೀಳಿಸುವ ಸತ್ಯ..!

By admin

December 19, 2018

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ವಿಷ ಮಿಶ್ರಿತ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 15 ಕ್ಕೆ ಏರಿದೆ. ಇನ್ನೂ ಹಲವಾರು ಮಂದಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮಧ್ಯೆ ಪ್ರಸಾದಕ್ಕೆ ವಿಷ ಬೆರೆಸಿದವರು ಯಾರು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹತ್ವದ ಮಾಹಿತಿ ದೊರೆತಿದೆ ಎನ್ನಲಾಗಿದೆ. ಸಾಲೂರು ಮಠದ ಸ್ವಾಮಿಗಳ ನಡುವಿನ ಒಳಜಗಳದ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಿರಿಯ ಸ್ವಾಮೀಜಿ ಮಹಾದೇವಸ್ವಾಮಿ ಚಿತಾವಣೆ ಮೇರೆಗೆ ದೊಡ್ಡಯ್ಯ ಎಂಬಾತ ವಿಷ ಬೆರೆಸಿದ್ದ ಎನ್ನಲಾಗಿದೆ.

ಈ ಹಿಂದೆಯೂ ಕ್ರಿಮಿನಲ್ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ದೊಡ್ಡಯ್ಯ, ಘಟನೆ ನಡೆದ ದಿನದಂದು ಪ್ರಸಾದಕ್ಕೆ ಕೀಟನಾಶಕ ಬೆರೆಸಿದ್ದ ಎಂದು ಹೇಳಲಾಗಿದ್ದು, ವಿಚಾರಣೆ ವೇಳೆ ಇದನ್ನು ಒಪ್ಪಿಕೊಂಡಿದ್ದಾನೆಂದು ತಿಳಿದುಬಂದಿದೆ.

ಪ್ರಸಾದ ಸೇವಿಸಿದ ಭಕ್ತರು ಅಸ್ವಸ್ಥರಾಗಿ ಬೀಳುತ್ತಿದ್ದಂತೆಯೇ ಗಾಬರಿಗೊಂಡಿದ್ದ ದೊಡ್ಡಯ್ಯ, ತಾನು ಪ್ರಸಾದ ಸೇವಿಸದಿದ್ದರೂ ಅಸ್ವಸ್ಥಗೊಂಡವನಂತೆ ನಾಟಕವಾಡಿ ಆಸ್ಪತ್ರೆಗೆ ದಾಖಲಾಗಿದ್ದನ್ನೆನ್ನಲಾಗಿದೆ. ಆದರೆ ವೈದ್ಯರು ಚಿಕಿತ್ಸೆ ನೀಡಲು ಮುಂದಾದ ವೇಳೆ ದೇಹದಲ್ಲಿ ಯಾವುದೇ ವಿಷದ ಅಂಶ ಕಂಡು ಬಂದಿರಲಿಲ್ಲ. ಇದರ ಮಾಹಿತಿ ಪಡೆದ ಪೊಲೀಸರು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆಂದು ಹೇಳಲಾಗಿದೆ.

ಪ್ರಸಾದ ತಯಾರಿಸಿದ್ದ ಪುಟ್ಟಸ್ವಾಮಿ ಎಂಬಾತನು ವಿಷ ಬೆರೆಸಿದ ಈ ಕೃತ್ಯದಲ್ಲಿ ಪಾಲುದಾರನೆಂದು ಹೇಳಲಾಗಿದ್ದು, ಯಾರಿಗೂ ಅನುಮಾನ ಬರಬಾರದೆಂಬ ಕಾರಣಕ್ಕೆ ಸ್ವಂತ ತನ್ನ ಮಗಳಿಗೆ ವಿಷ ಮಿಶ್ರಿತ ಪ್ರಸಾದವನ್ನು ತಿನ್ನಿಸಿ ಆಕೆಯ ಸಾವಿಗೆ ಕಾರಣವಾಗಿದ್ದನ್ನೆನ್ನಲಾಗಿದೆ.

ಬಳಿಕ ತಾನೂ ಪ್ರಸಾದ ಸೇವಿಸಿದವನಂತೆ ನಾಟಕವಾಡಿ ಆಸ್ಪತ್ರೆಗೆ ದಾಖಲಾಗಿದ್ದ. ಆತನನ್ನೂ ಈಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇವಾಲಯಕ್ಕೆ ಬರುತ್ತಿದ್ದ ಭಾರೀ ಆದಾಯವೇ ಇಂತಹುದೊಂದು ಹೀನಕೃತ್ಯಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.