ಧಾರವಾಡ ಜಿಲ್ಲೆಯ ಹೊಸ ಯಲ್ಲಾಪುರದ ರೈತ ಯಲ್ಲನಗೌಡ ಪಾಟೀಲ ಮನೆಯಲ್ಲಿ ದೀಪಾವಳಿ ಪಾಡ್ಯದ ದಿನದಂದು ದೇವಿಯ ಮೂರ್ತಿಯು ಪತ್ತೆಯಾಗಿದೆ. ಜನ ಮರಳೋ ಜಾತ್ರೆ ಮರಳೋ ಎನ್ನುವ ಹಾಗೆ, ಗೋಡೆಯಲ್ಲಿ ಉದ್ಭವವಾಗಿದೆ ಎನ್ನಲಾದ ದೇವಿಯನ್ನು ನೋಡಲು ಇಡೀ ಊರಿಗೆ ಊರೇ ಸೇರುತ್ತಿದೆ.
ಧಾರವಾಡ ನಗರದ ಹೊಸ ಯಲ್ಲಾಪುರದ ದುಂಡಿ ಓಣಿಯಲ್ಲಿರುವ ಯಲ್ಲನ್ನಗೌಡ ಪಾಟೀಲ ಅವರ ಮನೆಯಲ್ಲಿ ದೇವಿ ಉದ್ಭವವಾಗಿದ್ದಾಳೆ ಎಂಬ ಸುದ್ದಿ ಹರಿದಾಡಿದ್ದು, ಈ ದೃಶ್ಯವನ್ನು ನೋಡಲು ಭಕ್ತ ಸಮೂಹವೇ ಹರಿದುಬರುತ್ತಿದೆ.
ಯಲ್ಲನ್ನಗೌಡ ದಂಪತಿ ದೇವಿಯ ಆರಾಧಕರಾಗಿದ್ದು, ದೀಪಾವಳಿ ಪಾಡ್ಯದ ದಿನ ಇವರ ಮನೆಗೆ ಬಂದ ಮಹಿಳೆಯೊಬ್ಬರು ದನದ ಕೊಟ್ಟಿಗೆ ಹತ್ತಿರದ ಜಾಗದಲ್ಲಿ ನಿಂತು ಇಲ್ಲಿ ಗೋಡೆಯ ಮೇಲೆ ದೇವಿ ಇದ್ದಾಳೆ ಎಂದು ಹೇಳಿದ್ದರಂತೆ. ಹಾಗಾಗಿ ಆ ಸ್ಥಳವನ್ನು ಅಗೆದು ನೋಡಿದಾಗ ಆ ಭಾಗದಲ್ಲಿ ದೇವಿಯ ಆಕಾರ ಕಂಡಿದೆ ಎನ್ನುವುದು ಭಕ್ತರ ಮಾತು.
ಈಗ ದೇವಿ ಉದ್ಭವವಾದ ಜಾಗದಲ್ಲಿ ಬೆಳ್ಳಿಯ ಮೂರ್ತಿಯನ್ನು ಇರಿಸಿ ಅದಕ್ಕೆ ನಿತ್ಯ ಪೂಜೆ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇದನ್ನು ನೋಡಲು ಜನ ಎಲ್ಲೆಲ್ಲಿಂದಲೋ ಬರುತ್ತಿದ್ದಾರೆ.