ಆಧ್ಯಾತ್ಮ

ನಿಮ್ಮ ಸಂತೋಷ ನಿಮ್ಮ ಕೈಯಲ್ಲಿಯೇ ಇದೆ!ಹೇಗೆ ಗೊತ್ತಾ? ಈ ಲೇಖನಿ ಓದಿ…..

By admin

June 23, 2017

ಈ ಜಗತ್ತಿನಲ್ಲಿ ಮನುಷ್ಯ ಜೀವನ ಪ್ರಾಣಿ–ಪಕ್ಷಿಗಳಿಗಿಂತ ಉನ್ನತ ಹಾಗೂ ಅರ್ಥಪೂರ್ಣವಾದುದ್ದು. ಒಮ್ಮೆ ಮನುಷ್ಯ ಜೀವ ತಳೆದ ಮೇಲೆ ಇನ್ನೊಂದು ಜನ್ಮದಲ್ಲಿ ಮತ್ತೆ ಮನುಷ್ಯನಾಗೇ ಹುಟ್ಟುತ್ತಾನೆ ಎಂದು ಹೇಳಲಾಗದು. ಇರುವ ಒಂದೇ ಜನ್ಮದಲ್ಲಿ ಸಕಲ ಸಂತೋಷವನ್ನು ಕಾಣಬೇಕು. ಮನುಷ್ಯ ಆಧ್ಯಾತ್ಮಿಕ ಮಾರ್ಗಗಳಲ್ಲಿ ಸಾಗುವ ಮೂಲಕ ತನ್ನೊಳಗೆ ತಾನು ಸಂತೋಷವನ್ನು ಕಂಡುಕೊಳ್ಳಬಹುದು.

ಒಬ್ಬ ಮನುಷ್ಯ ಜೀವನದಲ್ಲಿ ಐದಾರು ಕಾರುಗಳನ್ನು ಕೊಳ್ಳಬಹುದು, ಐಷಾರಾಮಿ ಬಂಗಲೆಯನ್ನು ಕಟ್ಟಿಸಬಹುದು, ಚಿನ್ನ, ಬೆಳ್ಳಿಯನ್ನು ಹೊದ್ದು ಮಲಗಬಹುದು. ಆದರೆ ಇದನ್ನೆಲ್ಲ ಅನುಭವಿಸಲು ಇರುವುದು ಒಂದೇ ಜನ್ಮ. ಈ ಜನ್ಮದಲ್ಲಿ ಅರ್ಧ ಸುಖ ಅನುಭವಿಸಿ, ಇನ್ನರ್ಧ ಸುಖವನ್ನು ಮುಂದಿನ ಜನ್ಮದಲ್ಲಿ ಅನುಭವಿಸುತ್ತೇನೆ ಎಂದರೆ ಅದು ಆಗದು. ಒಮ್ಮೆ ಜೀವನ ಮುಗಿದ ಮೇಲೆ ಮತ್ತೆ ಇನ್ನೊಂದು ಜನ್ಮವನ್ನು ನಾವು ಹಣ ಕೊಟ್ಟು ಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ ಮತ್ತೆ ಅಷ್ಟೇ ಸರಳ, ಸುಂದರ, ಪ್ರತಿಷ್ಠೆಯ ಜೀವನವನ್ನು ಪಡೆಯುತ್ತೇವೆ ಎಂದುಕೊಂಡರೆ ನಿಜಕ್ಕೂ ನಮ್ಮಷ್ಟು ಮೂರ್ಖರು ಯಾರು ಇಲ್ಲ.

ಆಧ್ಯಾತ್ಮಿಕ ಚಿಂತನೆಗಳು ನಮ್ಮ ಮನಸ್ಸಿಗೆ ಸಂತಸವನ್ನು ಹುಡುಕುವ ಮಾರ್ಗವನ್ನು ತೋರುತ್ತವೆ. ಜೀವನದಲ್ಲಿ ನಿರೀಕ್ಷೆಗಳಿಲ್ಲದೆ ಬದುಕಿದಾಗ ಸಂತೋಷದ  ಜೀವನವು ತಾನಾಗಿಯೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಆಧ್ಯಾತ್ಮಿಕ ಸತ್ಯಗಳನ್ನು ಕಂಡುಕೊಳ್ಳುವುದರಿಂದ ನಮ್ಮೊಳಗಿನ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬಹುದು. ತನ್ನ ಹಾಗೂ ಪರರ ಇಚ್ಛೆಗಳನ್ನು ಪೂರೈಸಲು ಕೂಡ ಈ ಚಿಂತನೆಗಳಿಂದ ಸಾಧ್ಯ.

ದೇವರು ನೀಡಿರುವ ಈ ಅಪರೂಪದ ಮಾನವ ಜೀವನವನ್ನು ಸಂತಸದಿಂದ ಕಳೆಯಬೇಕು. ಸದಾ ಕೊರಗುತ್ತಾ ಬದುಕಿ ಇರುವ ಒಂದೇ ಒಂದು ಜನ್ಮವನ್ನು ನೋವಿನಲ್ಲಿ ಕಳೆಯುವುದಕ್ಕಿಂತ ‘ಈ ಭೂಮಿ ಮೇಲೆ  ದೇವರು ನನಗೆ ನೀಡಿರುವ ಅಪರೂಪದ ಜನ್ಮ, ಮನುಷ್ಯ ಜನ್ಮ. ಇದು ನನಗೆ ಸಿಕ್ಕಿರುವ ಭಾಗ್ಯ. ನಾನೇ ಅದೃಷ್ಟವಂತ’ ಎಂದು ನಮಗೆ ನಾವೇ ಅಂದುಕೊಳ್ಳಬೇಕು. ಅಂತೆಯೇ  ಬದುಕನ್ನು ಸುಂದರವಾಗಿ ರೂಪಿಸಿಕೊಂಡು ಪ್ರತಿ ಕ್ಷಣದಲ್ಲೂ ಸಂತೋಷವನ್ನು ಹುಡುಕಿ ಬದುಕಬೇಕು.

 

ಸಂತೋಷವನ್ನು ಕಂಡುಕೊಳ್ಳಲು ಕೇವಲ ಮೂರು ಸೂತ್ರಗಳನ್ನು ಅನುಸರಿಸಿ :-

  1. ಏನಾದರೂ ಮಾಡುತಿರು ತಮ್ಮ…

ಜೀವನದಲ್ಲಿ ನಾವು ಅನೇಕ ಬಾರಿ, ಹಲವು ಕಾರಣಗಳಿಗೆ ಬೇಸರಗೊಳ್ಳುತ್ತೇವೆ. ಕಾರಣವೇ ಇಲ್ಲದೆ ಮನಸ್ಸಿಗೆ ಖೇದವಾಗುತ್ತದೆ. ಅದೇ ನೋವಿನಲ್ಲೇ ನಾವು ಎಷ್ಟೋ ಅಮೂಲ್ಯ ಸಮಯವನ್ನು ಹಾಳುಮಾಡಿಕೊಂಡಿರುತ್ತೇವೆ. ನಮಗೆ ಬೇಸರವಾದಾಗ ಅದರಿಂದ ಹೊರಬರುವ ಮಾರ್ಗವನ್ನು ನಾವೇ ಕಂಡುಕೊಳ್ಳಬೇಕು. ‘ಬೇಸರವಾದಾಗ ನಾನು ಇಂತಹ ಕೆಲಸ ಮಾಡಬೇಕು’ ಎಂದುಕೊಂಡು ಅದೇ ದಾರಿಯಲ್ಲಿ ಸಾಗಬೇಕು. ನಮ್ಮ ಮನಸ್ಸು ಸಂತಸಗೊಳ್ಳುವ ಹಾದಿಯನ್ನು ಕಂಡುಕೊಂಡು ಆ ಹಾದಿಯಲ್ಲೇ  ಮುಂದುವರಿಯಬೇಕು. ಬೇಸರ ಕಳೆಯಲು ಏನಾದರೂ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಅಡುಗೆ ಮಾಡುವುದನ್ನು ಕಲಿಯಬೇಕು. ಪ್ರತಿ ದಿನ ಹೊಸ ಹೊಸ ಪ್ರಯೋಗಗಳಲ್ಲಿ  ತೊಡಗಿಸಿಕೊಳ್ಳಬೇಕು. ಇದು ನಿಮ್ಮ ಮನಸ್ಸು ದುಃಖ, ನಿರಾಸೆಯೆಡೆಗೆ ಸುಳಿಯದಂತೆ ಮಾಡುತ್ತದೆ, ಜೊತೆಗೆ ಮನಸ್ಸನ್ನು ಸಂತಸದಿಂದಿರುವಂತೆ ನೋಡಿಕೊಳ್ಳುತ್ತದೆ.

  1. ಪ್ರೀತಿ ಇರಲಿ ಸಕಲವಸ್ತುಗಳಲಿ…

ಸ್ನೇಹಿತರು ಮತ್ತು ಬಂಧುಗಳು ನಮ್ಮ ಸಂತೋಷದ ಪಾಲುದಾರರಾಗಿರುತ್ತಾರೆ. ನಮ್ಮ ಪ್ರತಿ ನೋವು, ನಲಿವಿನಲ್ಲೂ  ಜೊತೆಯಾಗುವುದು ನಮ್ಮ ಸ್ನೇಹಿತರೇ. ಕೆಲಸವಿಲ್ಲದೇ ಅಲೆಯುತ್ತಿದ್ದಾಗ, ಕಾಯಿಲೆ ಬಿದ್ದು ಹಾಸಿಗೆಯಲ್ಲಿ ಮಲಗಿದ್ದಾಗ, ಪರಮಾಪ್ತರು ನಮ್ಮಿಂದ ದೂರವಾದಾಗ, ಆ ನೋವನ್ನೆಲ್ಲ ನಮ್ಮಿಂದ ಭರಿಸಲು ಸಾಧ್ಯವಾಗುವುದು ನಮ್ಮ ಸ್ನೇಹಿತರು ಮತ್ತು ಬಂಧುಗಳಿಗೆ ಮಾತ್ರ. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತಿಸಿದರೆ ನಮ್ಮೊಳಗಿನ ನೋವುಗಳಲ್ಲಿ ಅವರು ಜೊತೆಯಾಗುತ್ತಾರೆ. ಮನುಷ್ಯರು ನಂಬಿಕೆಗೆ ಆರ್ಹರಲ್ಲ ಎನ್ನಿಸಿದರೆ – ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಬೇಕು. ಆ ಪ್ರೀತಿಗೆ ನೋವು ಮರೆಸುವ ಮಾಂತ್ರಿಕ ಶಕ್ತಿಯಿದೆ.

  1. ನಂಬಿ ಕೆಟ್ಟವರಿಲ್ಲವೋ…

ನಮ್ಮ ಜೀವನದಲ್ಲಿ ಏನಾದರೂ ಒಂದು ಹೊಸ ಸಂಗತಿ ಘಟಿಸುತ್ತದೆ ಎಂದು ನಂಬುವುದರಲ್ಲಿ ಸಂತೋಷದ ಗುಟ್ಟಿದೆ. ನಂಬಿಕೆ  ಸಂತೋಷದ ಬುನಾದಿ. ನಾವು ಅಂದುಕೊಂಡ ಗುರಿ ತಲುಪಲು ಕೂಡ ನಂಬಿಕೆಯಿಂದ ಸಾಧ್ಯ. ನಮ್ಮ ಪ್ರತಿ ಸಂತೋಷವೂ ಕೂಡ ನಾವು ಮಾಡಿದ ಕೆಲಸವನ್ನು ಅವಲಂಬಿಸಿದೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೊಂದು ಗುರಿ ಇರಬೇಕು, ಆ ಗುರಿಯನ್ನು ಸಾಧಿಸಬೇಕು ಎಂಬ ಕನಸು ಇರಬೇಕು. ಆ ಗುರಿಯನ್ನು ನಾನು ಮುಟ್ಟಿಯೇ ತೀರುತ್ತೇನೆ ಎಂಬ ಛಲವಿರಬೇಕು. ನಾವು ಅಂದುಕೊಂಡ ಗುರಿ ಸಾಧಿಸದಿದ್ದರೆ ನಾವು ಸಂತೃಪ್ತರಾಗುವುದಿಲ್ಲ. ಸಂತೃಪ್ತಭಾವವು ಖುಷಿಯನ್ನು ಹರಡುವ ಮನೋಭಾವ. ನಾವು ಮಾಡುವ ಕೆಲಸ, ನಮ್ಮ ಸ್ನೇಹಿತರು ಹಾಗೂ ಬಂಧುಗಳ ನಡುವೆ ನಂಬಿಕೆಯನ್ನು ಕಳೆದುಕೊಂಡರೆ ನಮ್ಮೊಳಗಿನ ಸಂತೋಷವನ್ನು ನಾವೇ ಕಳೆದುಕೊಂಡಂತೆ.

ನಮ್ಮೊಳಗೇ ಇರುವ ಸಂತೋಷವನ್ನು ನಾವೇ ಕಂಡುಕೊಳ್ಳಬೇಕು. ಸಂತೋಷವನ್ನು ಅನುಭವಿಸುವುದೆಂದರೆ, ಈ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವುದು.