Cinema

ದರ್ಶನ್, ಸುದೀಪ್ ಅಭಿಮಾನಿಗಳಿಗೆ ಸಿಹಿಸುದ್ದಿ – ಆಗಸ್ಟ್ 9ರ ಬದಲು 2ಕ್ಕೆ ಕುರುಕ್ಷೇತ್ರ ರಿಲೀಸ್

By admin

July 04, 2019

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸ್ಯಾಂಡಲ್‍ವುಡ್ ಸ್ಟಾರ್ ಗಳ ಬಾಕ್ಸ್ ಆಫೀಸ್ ಯುದ್ಧ ಇದೀಗ ಕ್ಯಾನ್ಸಲ್ ಆಗಿದೆ.ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರಗಳಾದ ‘ಮುನಿರತ್ನ ಕುರುಕ್ಷೇತ್ರ’ ಹಾಗೂ ‘ಪೈಲ್ವಾನ್’ ಒಂದೇ ದಿನ ಅಂದರೆ ಆಗಸ್ಟ್ 9ರಂದು ಬಿಡುಗಡೆಯಾಗಲು ಸಿದ್ಧವಾಗಿತ್ತು. ಆದರೆ ಈಗ ಆಗಸ್ಟ್ 9ರಂದು ಬಿಡುಗಡೆ ಆಗಬೇಕಿದ್ದ ಕುರುಕ್ಷೇತ್ರ ಚಿತ್ರ ಆಗಸ್ಟ್ 2ರಂದು ಬಿಡುಗಡೆ ಆಗಲಿದೆ.

ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರ ಕೂಡ ಆಗಸ್ಟ್ 9ರಂದು ರಿಲೀಸ್ ಆಗಲಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಈಗ ಪೈಲ್ವಾನ್ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಆಗಸ್ಟ್ 29ಕ್ಕೆ ಪೈಲ್ವಾನ್ ರಿಲೀಸ್ ಮಾಡಲು ನಿರ್ದೇಶಕ ಕೃಷ್ಣ ನಿರ್ಧರಿಸಿದ್ದಾರೆ. ಸೆ.2ರಂದು ಸುದೀಪ್ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಈ ದಿನಾಂಕವನ್ನು ನಿಗದಿ ಮಾಡಲಾಗಿದೆ. ಈ ವಿಷಯ ಕೇಳಿ ಸುದೀಪ್ ಅಭಿಮಾನಿಗಳು ಖುಷಿ ಆಗಿದ್ದಾರೆ.

ಕುರುಕ್ಷೇತ್ರ ಹಾಗೂ ಪೈಲ್ವಾನ್ ಚಿತ್ರ ಒಟ್ಟಿಗೆ ರಿಲೀಸ್ ಆಗಿದ್ದರೆ, 13 ವರ್ಷಗಳ ನಂತರ ಸುದೀಪ್ ಹಾಗೂ ದರ್ಶನ್ ಮುಖಾಮುಖಿ ಆಗುತ್ತಿದ್ದರು. 2006ರ ಫೆಬ್ರವರಿ 17ರಂದು ಕಿಚ್ಚನ ಮೈ ಆಟೋಗ್ರಾಫ್’ ಹಾಗೂ ದರ್ಶನ್ ಅವರಸುಂಟರಗಾಳಿ’ ಸಿನಿಮಾ ಒಂದೇ ದಿನ ತೆರೆಕಂಡು ಚಿತ್ರಮಂದಿರದ ಅಖಾಡದಲ್ಲಿ ಧೂಳೆಬ್ಬಿಸಿತ್ತು.

ಕುರುಕ್ಷೇತ್ರ ಬರೋಬ್ಬರಿ 50 ರಿಂದ 60 ಕೋಟಿ ರೂ. ವೆಚ್ಚದಲ್ಲಿ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿದೆ. ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದಾರೆ. ಈ ಮೊದಲು ದರ್ಶನ್ ಅಭಿನಯದ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದರು. ನೂತನ ತಂತ್ರಜ್ಞಾನದಲ್ಲಿ ಬಾಹುಬಲಿ ಚಿತ್ರಕ್ಕಾಗಿ ದುಡಿದ ತಂತ್ರಜ್ಞಾನಿಗಳ ಕೈಚಳಕದಲ್ಲಿ ಕನ್ನಡದ ಕುರುಕ್ಷೇತ್ರ ಮೂಡಿ ಬಂದಿದೆ.

ಪೈಲ್ವಾನ್ ಚಿತ್ರ ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಚಿತ್ರದ ಮೇಕಿಂಗ್ ನೋಡಿ ತೆಲುಗು, ತಮಿಳು, ಮಲೆಯಾಳಂ, ಪಂಜಾಬಿ, ಬೆಂಗಾಲಿ, ಮರಾಠಿ, ಭೋಜ್‍ಪುರಿ ವಿತರಕರು ಡಬ್ಬಿಂಗ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸುದೀಪ್ ಆಪ್ತ ರಿತೇಶ್ ದೇಶಮುಖ್ ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರೆ. ಒಟ್ಟು 30ರಿಂದ 40 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ.