ಆಧ್ಯಾತ್ಮ

ರೋಗಮುಕ್ತ ಜೀವನಕ್ಕಾಗಿ ಯೋಗಾಭ್ಯಾಸ ಮಾಡಿ

By KOLAR NEWS CHANDRU

December 27, 2022

ಯೋಗಾಭ್ಯಾಸದಿಂದ ವ್ಯಕ್ತಿಯ ಆತ್ಮಗೌರವ, ಹಾಗೂ ಆತ್ಮವಿಶ್ವಾಸವು ವೃದ್ಧಿಸುತ್ತದೆ.

ನಿರಂತರವಾಗಿ ಯೋಗಾಭ್ಯಾಸವನ್ನು ರೂಢಿಸಿಕೊಂಡವರು ರೋಗಮುಕ್ತವಾದ ಜೀವನವನ್ನು ನಡೆಸಬಹುದು ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬೆಂಗಳೂರು ಪಶ್ಚಿಮ ವಲಯದ ಸಂಚಾಲಕ ಜಯರಾಮ್ ರವರು ಅಭಿಪ್ರಾಯಪಟ್ಟರು. ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಯೋಗಾಭ್ಯಾಸ ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯೋಗಾಭ್ಯಾಸವನ್ನು ಎಲ್ಲಿ ಬೇಕಾದರೂ ಮಾಡಬಹುದು. ಅದಕ್ಕೆ ವಿಶೇಷ ತಯಾರಿ ಅಥವಾ ಪರಿಕರಗಳೇನೂ ಬೇಕಾಗಿಲ್ಲ. ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರಸ್ತುತ ಜೀವನವು ಒತ್ತಡದಿಂದ ಕೂಡಿದೆ. ಎಲ್ಲರೂ ಯಂತ್ರಗಳAತೆ ಕೆಲಸ ಮಾಡುತ್ತಿದ್ದಾರೆ. ಇದರ ಫಲವಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗದಂತಹ ಅನೇಕ ಅನಾರೋಗ್ಯಗಳನ್ನು ಅನುಭವಿಸುವಂತಾಗಿದೆ. ಇದಕ್ಕೆ ಪರಿಹಾರವೆಂದರೆ ದಿನದಲ್ಲಿ ಸ್ವಲ್ಪ ಸಮಯವಾದರೂ ಯೋಗಾಭ್ಯಾಸಕ್ಕೆ ಮೀಸಲಿಡಬೇಕು ಎಂದರು.

ಯೋಗಾಭ್ಯಾಸದಿಂದ ವ್ಯಕ್ತಿಯ ಆತ್ಮಗೌರವ, ಹಾಗೂ ಆತ್ಮವಿಶ್ವಾಸವು ವೃದ್ಧಿಸುತ್ತದೆ. ಆತ್ಮವಿಶ್ವಾಸದಿಂದ ಉತ್ತಮವಾದ ವ್ಯಕ್ತಿತ್ವವೂ ರೂಪುಗೊಳ್ಳುತ್ತದೆ. ಪ್ರಾಣಾಯಾಮವನ್ನು ಮಾಡುವುದರಿಂದ ಏಕಾಗ್ರತೆ ಉಂಟಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ರವರು ಮಾತನಾಡಿ ಕೈವಾರ ತಾತಯ್ಯನವರು ಯೋಗಸಾಧಕರು. ಯೋಗ ಸಾಧನೆಯ ಮಹತ್ವ ಹಾಗೂ ವಿವರಗಳನ್ನು ತಾತಯ್ಯನವರು ಕೀರ್ತನೆ, ಶತಕಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಉತ್ತಮ ಯೋಗ ಸಾಧಕರಾಗಲೂ ಕೈವಾರ ತಾತಯ್ಯನವರ ಯೋಗಸಾಧನ ವಿಧಾನವು ಸಹಕಾರಿಯಾಗಿದೆ. ಯೋಗಾಭ್ಯಾಸಿಗಳು ಇದರ ಅಧ್ಯಯನವನ್ನು ಮಾಡಬೇಕು ಎಂದು ಹೇಳುತ್ತಾ ಕೈವಾರ ಕ್ಷೇತ್ರದ ಮಹಿಮೆಯನ್ನು ತಿಳಿಸಿಕೊಟ್ಟರು.

ಬೆಂಗಳೂರಿನಿಂದ ಬಂದಿದ್ದ ಯೋಗಬಂಧುಗಳು ಶ್ರೀಕ್ಷೇತ್ರ ಕೈವಾರದಲ್ಲಿರುವ ಶ್ರೀಅಮರನಾರೇಯಣಸ್ವಾಮಿ, ಶ್ರೀ ಭೀಮಲಿಂಗೇಶ್ವರಸ್ವಾಮಿ ದೇವಾಲಯಗಳನ್ನು ದರ್ಶಿಸಿ, ಕೈವಾರ ಬೆಟ್ಟದ ಚಾರಣವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆ, ಭಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಯೋಗಿನಾರೇಯಣ ಮಠದ ಆಡಳಿತಾಧಿಕಾರಿ ಕೆ.ಲಕ್ಷಿ÷್ಮÃನಾರಾಯಣ, ಪತಂಜಲಿ ಯೋಗ ಸಮಿತಿಯ ಕಾರ್ಯದರ್ಶಿ ಸಾಗರ್ ಮತ್ತಿತರರು ಉಪಸ್ಥಿತರಿದ್ದರು.