ಕಲಬುರಗಿ ಮಹಾನಗರಕ್ಕೆ ಶಾಶ್ವತ ಕುಡಿಯವ ನೀರು ಕಲ್ಪಿಸುವ ಸಂಬಂಧ 750 ಕೋಟಿ ರೂ.ಗಳ ವೆಚ್ಚದ ಯೋಜನೆಗೆ ಮುಂದಿನ ಮೂರು ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಘೋಷಿಸಿದ್ದಾರೆ. ಕಲಬುರಗಿ ಪಾಲಿಕೆಯ ಸ್ಮಾರಕ ಭವನ (ಟೌನ್ಹಾಲ್) ದಲ್ಲಿ ಮಂಗಳವಾರ ಜನಸ್ಪಂದನ ಕಾರ್ಯಕ್ರಮದ ಬಳಿಕ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಮುಂದಿನ 5 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದ್ದು, ಭೀಮಾ ನದಿ, ಬೆಣ್ಣೆತೊರಾವಲ್ಲದೆ, ನಗರದ ಕಲ್ಯಾಣಿಗಳು, ಬಾವಿಗಳು ಮುಂತಾದ ನೀರಿನ ಮೂಲಗಳನ್ನು ಪತ್ತೆ ಹಚ್ಚಿ ಯೋಜನೆ ಸಾಕಾರಗೊಳಿಸಿ, ಕಲಬುರಗಿ ನಗರಕ್ಕೆ ನಿರಂತರ 24ಘಿ7 ಕುಡಿಯುವ ನೀರು ಪೂರೈಸಲಾಗುವುದು ಎಂದು ಅವರು ಧೃಡ ವಿಶ್ವಾಸದಿಂದ ನುಡಿದರು.ನಗರ ಪ್ರತಿವರ್ಷ ಬೆಳೆಯುತ್ತಾ ಹೋಗುತ್ತಿದೆ. ಇಂದು ನಗರದ ಜನಸಂಖ್ಯೆ ಅಧಿಕವಾಗುತ್ತಿದೆ. ಆ ಕಾರಣದಿಂದಾಗಿ ನೀರು ಕೂಡ ಅದೇ ಪ್ರಮಾಣದಲ್ಲಿ ಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.
ಕಲಬುರಗಿ ಮಹಾನಗರದಲ್ಲಿ ಐಎಸ್ಐ ಗುರುತು ಇಲ್ಲದ ನೀರಿನ ಕ್ಯಾನ್ ವಾಟರ್ ಮಾರುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಸ್ಮಾರ್ಟ್ ಸಿಟಿ ಕೇಂದ್ರ ಸರ್ಕಾರ ಮಾಡುವಂತಹದ್ದು, ಅದಕ್ಕೆ ನಾವು ಕಾಯ್ತಿಲ್ಲ. ರಾಜ್ಯ ಈಗಾಗಲೇ ಎಲ್ಲಾ ರೀತಿಯಿಂದ ಕಲಬುರಗಿಯನ್ನು ಸ್ಮಾರ್ಟ್ ಸಿಟಿ ಮಾದರಿಯಲ್ಲೇ ಅಭಿವೃದ್ಧಿ ಪಡಿಸುತ್ತಿದೆÉ. ಈ ನಿಟ್ಟಿನಲ್ಲಿ ಈಗಾಗಲೇ ಪೊಲೀಸ್ ಆಯುಕ್ತರ ಕಾರ್ಯಾಲಯ, ರಿಂಗ್ ರೋಡ್ ಸೇರಿದಂತೆ ಹಲವು ಕೆಲಸಗಳನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಹೆಮ್ಮೆಯಿಂದ ಹೇಳಿದರು.
ಮಾಜಿ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮದಿಂದ ಹೈದ್ರಾಬಾದ-ಕರ್ನಾಟಕಕ್ಕೆ 371ಜೆ ಬಂದ ನಂತರ 30 ಸಾವಿರ ಉದ್ಯೋಗ ಸೃಷ್ಟಿಯಾಗಿವೆ. ಖಾಲಿ ಹುದ್ದೆಗಳ ತುಂಬುವ ನಿಟ್ಟಿನಲ್ಲಿ ಹೈದ್ರಾಬಾದ್ ಕರ್ನಾಟಕ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಹೆಚ್ಚು ಸೇವೆ ಸಲ್ಲಿಸಿರುವ ಅಧಿಕಾರಿಗಳನ್ನು ಈ ಭಾಗಕ್ಕೆ ವರ್ಗಾಯಿಸುವಂತಹ ಕೆಲಸ ನಡೆದಿದೆ ಎಂದು ಅವರು ಹೇಳಿದರು. ರಾಜ್ಯದ ಎಲ್ಲಾ ಮಹಾನಗರಗಳ ವ್ಯಾಪ್ತಿಯಲ್ಲಿ ಎಲ್ಲಿ ದೊಡ್ಡ ಕಾಲುವೆಗಳು ಇವೆಯೋ ಅವುಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಕಾಮಗಾರಿಯನ್ನು ಅದಷ್ಟು ಬೇಗ ಕೈಗೊಳ್ಳಲಾಗುವುದು. ರಸ್ತೆ ಅಭಿವೃದ್ಧಿ ಸೇರಿದಂತೆ ನಗರ ಅಭಿವೃದ್ಧಿಗೆ 8 ಲಕ್ಷಕ್ಕಿಂತ ಜನಸಂಖ್ಯೆ ಕಡಿಮೆ ಇರುವ ರಾಜ್ಯದ ಮಹಾನಗರ ಪಾಲಿಕೆಯಲ್ಲಿ ಈ ವರ್ಷ 125 ಕೋಟಿ ರೂ.ಗಳು ಬಿಡುಗಡೆ ಮಾಡಿದ್ದೇವೆ. 10 ಲಕ್ಷ ಜನಸಂಖ್ಯೆ ಇರುವ ಮಹಾನಗರಗಳಿಗೆ 150 ಕೋಟಿ ರೂ.ಗಳು ಬಿಡುಗಡೆ ಮಾಡಿದ್ದೇವೆ ಎಂದು ವಿವರಿಸಿದರು.